ಬೆಂಗಳೂರು: ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಮೂರು ವರ್ಷಗಳಿಂದ ಘನ ತ್ಯಾಜ್ಯ ವಿಲೇವಾರಿ ಗುತ್ತಿಗೆಯಲ್ಲಿ ₹2.37 ಕೋಟಿ ಮೊತ್ತದ ನಕಲಿ ಬಿಲ್ ಸೃಷ್ಟಿಸಿ, ಹಣ ಪಡೆದ ಪ್ರಕರಣದ ಕುರಿತು ತನಿಖೆಗೆ ಆದೇಶಿಸಲಾಗಿದೆ. ಆದರೆ, ಈ ವಿಚಾರ ಸ್ಥಳೀಯ ಶಾಸಕರೂ ಆಗಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಗಮನಕ್ಕೆ ಬಂದಿಲ್ಲ ಎಂದರೆ ನಂಬಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಜ್ಯ ವಕ್ತಾರ ಪ್ರಕಾಶ್ ಹೇಳಿದ್ದಾರೆ.
‘ಸ್ಥಳೀಯ ಶಾಸಕರ ಗಮನಕ್ಕೆ ಬರದೇ ಯಾವುದೇ ಬಿಲ್ ಪಾವತಿ ಆಗುವುದಿಲ್ಲ. ದಿನೇಶ್ ತಪ್ಪು ಮಾಹಿತಿ ನೀಡುತ್ತಿದ್ದಾರೆ’ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.ತಮ್ಮ ಕ್ಷೇತ್ರದಲ್ಲಿ ಕಸ ವಿಲೇವಾರಿ ಸಮರ್ಪಕವಾಗಿ ಆಗುತ್ತಿದೆಯೇ? ಜನರಿಗೆ ಸಮಸ್ಯೆ ಆಗುತ್ತಿದೆಯೇ ಎಂಬುದರ ಬಗ್ಗೆ ಗಮನ ಕೊಡದೇ ಕರ್ತವ್ಯದಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಈ ಹಗರಣಕ್ಕೆ ಸಂಬಂಧಿಸಿದಂತೆ ಸರ್ಕಾರವು ಬಿಬಿಎಂಪಿ ವಿಶೇಷ ಕಮಿಷನರ್ ವಿಕಾಸ್ ಕಿಶೋರ್ ಅವರನ್ನು ತನಿಖೆಗೆ ನೇಮಿಸಿದೆ. ಅಧಿಕಾರಿಗಳು ಕೈಜೋಡಿಸದೇ ಗುತ್ತಿಗೆದಾರ ಇಷ್ಟು ದೊಡ್ಡ ಮೊತ್ತ ಪಡೆಯಲು ಸಾಧ್ಯವಿಲ್ಲ ಎಂದೂ ಅವರು ದೂರಿದರು.
ಕ್ಷೇತ್ರದ ವ್ಯಾಪ್ತಿಯಲ್ಲಿ ಇತ್ತೀಚೆಗೆ ಗೇಟ್ ಬಿದ್ದು ಮಗು ಸತ್ತು ಹೋಗಿದೆ. ಕಳಪೆ ಕಾಮಗಾರಿಯಿಂದ ಈ ರೀತಿ ಆಗಿದೆ. ಗುತ್ತಿಗೆದಾರರ ವಿರುದ್ಧ ಪ್ರಕರಣ ದಾಖಲಿಸಿಲ್ಲ. ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಕಳಪೆ ಕಾಮಗಾರಿ ವ್ಯಾಪಕವಾಗಿದೆ. ತಮ್ಮ ಮೂಗಿನಡಿ ನಡೆಯುವ ಅವ್ಯವಹಾರಗಳನ್ನು ಕೂಡ ದಿನೇಶ್ ಗುಂಡೂರಾವ್ ಅವರು ಗಮನಿಸದೆ ಇರುವುದು ಶೋಚನೀಯ ಎಂದರು.
ಬಿಜೆಪಿ ರಾಜ್ಯ ಘಟಕದ ಮುಖ್ಯ ವಕ್ತಾರ ಅಶ್ವತ್ಥ ನಾರಾಯಣ್, ಬಿಜೆಪಿ ಬೆಂಗಳೂರು ಕೇಂದ್ರ ಜಿಲ್ಲಾ ಸಮಿತಿ ಅಧ್ಯಕ್ಷ ಸಪ್ತಗಿರಿಗೌಡ, ಉತ್ತರ ಜಿಲ್ಲಾ ಸಮಿತಿ ಅಧ್ಯಕ್ಷ ಹರೀಶ್ ಪತ್ರಿಕಾಗೋಷ್ಠಿಯಲ್ಲಿದ್ದರು.


