ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಬಿಬಿಎಂಪಿ ಗುತ್ತಿಗೆ ಪೌರಕಾರ್ಮಿಕರ ಇ.ಎಸ್.ಐ ಮತ್ತು ಪಿ.ಎಫ್ ಹಣದ ಮೊತ್ತ ಬರೋಬ್ಬರಿ 384.00 ಕೋಟಿ ರೂಪಾಯಿ ಮತ್ತು 6,600 ನಕಲಿ ಪೌರಕಾರ್ಮಿಕರ ಹೆಸರಿನಲ್ಲಿ ಬರೋಬ್ಬರಿ 550.00 ಕೋಟಿ ರೂಪಾಯಿಗಳ ವೇತನ ವಂಚನೆ ಆಗಿದೆ ಎನ್ನುವ ಬೃಹತ್ ಹಗರಣದ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಭ್ರಷ್ಟಾಚಾರ ನಿಗ್ರಹ ದಳದ ಬೆಂಗಳೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ದೂರಿಗೆ ಸಂಬಂಧಿಸಿದಂತೆ ಮೊಕದ್ದಮೆಯ ತನಿಖಾಧಿಕಾರಿಗಳಿಗೆ ಬಿ.ಬಿ.ಎಂ.ಪಿಯ ದಾಖಲೆಯ ಪರಿಶೀಲನೆಗೆ ಸಹಕರಿಸುವ ಸಂಬಂಧಿಸಿದಂತೆ ತಾಂತ್ರಿಕ ತಂಡವನ್ನು ರಚಿಸಲಾಗಿದೆ. ತಾಂತ್ರಿಕ ತಂಡದ ರಚನೆಗೆ ಆದೇಶ ಹೊರಡಿಸಿದ ಬೆನ್ನಲ್ಲೇ ಈ ಪ್ರಕರಣ ವಿಷಯ ಬಹಿರಂಗವಾಗಿದೆ.
sep 2024- ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿಯು ಆರು ಜನ ಅಧಿಕಾರಿಗಳನ್ನು ಒಳಗೊಂಡ ತಾಂತ್ರಿಕ ಸಮಿತಿಯನ್ನು ರಚನೆ ಮಾಡಿದೆ. ಈ ತಾಂತ್ರಿಕ ತಂಡದಲ್ಲಿ ಬಿಬಿಎಂಪಿಯ ಘನತ್ಯಾಜ್ಯ ವಿಭಾಗದ ಮುಖ್ಯ ಎಂಜಿನಿಯರ್ ಬಸವರಾಜ ಕಬಾಡೆ – ಮುಖ್ಯ ಅಧ್ಯಕ್ಷರಾಗಿದ್ದಾರೆ. ಅಧಿಕಾರಿಗಳಾದ ಉದಯ್ ಚೌಗುಲೆ, ಅಬ್ದುರಾಜ್ ಎಂ.ಶಿವಶಂಕರ್, ಕದರಣ್ಣ ಹಾಗೂ ಕಾಶಿನಾಥ್ ಇದ್ದಾರೆ. ಬಿಬಿಎಂಪಿಯ ಘನತ್ಯಾಜ್ಯ ವಿಭಾಗದ ಮುಖ್ಯ ಎಂಜಿನಿಯರ್ ಬಸವರಾಜ ಕಬಾಡೆ ಅವರ ಅಧ್ಯಕ್ಷತೆಯಲ್ಲಿ ರಚಿಸಲಾದ ಈ ತಾಂತ್ರಿಕ ತಂಡವು ಬಿಬಿಎಂಪಿಯಲ್ಲಿನ ಸಂಬಂಧಿತ ದಾಖಲೆಗಳನ್ನು ಕರ್ನಾಟಕ ಲೋಕಾಯುಕ್ತದ ತನಿಖಾಧಿಕಾರಿಯವರಿಗೆ ಶೀಘ್ರವಾಗಿ ಒದಗಿಸಲು ಹಾಗೂ ತನಿಖೆಗೆ ಅಗತ್ಯ ಸಹಕಾರ ನೀಡಬೇಕು ಎಂದು ಸೂಚನೆ ನೀಡಲಾಗಿದೆ. ಈ ಸಂಬಂಧ ಬಿಬಿಎಂಪಿಯ ಆರೋಗ್ಯ ಹಾಗೂ ನೈರ್ಮಲೀಕರಣದ ವಿಶೇಷ ಆಯುಕ್ತ ಸುರಾಳ್ಕರ್ ವಿಕಾಸ್ ಕಿಶೋರ್ ಆದೇಶ ಹೊರಡಿಸಿದ್ದಾರೆ.


